Smart Meter ಸ್ಮಾರ್ಟ್ ಮೀಟರ್ ಯೋಜನೆಗೆ ಹೈಕೋರ್ಟ್ ತಡೆ: ದುಬಾರಿ ಶುಲ್ಕದ ವಿರುದ್ಧ ತೀವ್ರ ಆಕ್ಷೇಪ
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಜಾರಿಗೆ ತರುವ ಸ್ಮಾರ್ಟ್ ಮೀಟರ್(Smart Meter) ಅಳವಡಿಕೆ ಯೋಜನೆಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಮೀಟರ್ ದರದ ಭಾರಿ ಹೆಚ್ಚಳದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಪೀಠ, “ಬಡ ಜನರಿಂದ ಇಷ್ಟು ದುಡ್ಡು ಕೇಳಿದರೆ, ಅವರು ಎಲ್ಲಿ ಹೋಗಬೇಕು?” ಎಂದು ಬೆಸ್ಕಾಂ ಮೇಲೆ ಕಿಡಿಕಾರಿತು.
ಸುಳಿವು ನೀಡಿದ ಅಸಮಾನ ಧರಗಳು
ಹಳೆಯ ಸ್ಮಾರಿಕ್ ಮೀಟರ್ಗಳ ಬೆಲೆ ₹980 ರಿಂದ ₹3,450 ವರೆಗಿದ್ದರೆ, ಹೊಸ ಸ್ಮಾರ್ಟ್ ಮೀಟರ್ಗಳ ದರ ₹4,800 ರಿಂದ ₹10,900 ವರೆಗೆ ಏರಿದೆ. ಇದರಿಂದ ಶೇಕಡಾ 400 ರಿಂದ 800ರಷ್ಟು ದರ ಏರಿಕೆಯಾಗಿದೆ.
ಅರ್ಜಿದಾರರ ವಾದ:
ಅರ್ಜಿದಾರರಾದ ಜಯಲಕ್ಷ್ಮೀ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ, “ಬೇರೆ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಕೇವಲ ₹900ಕ್ಕೆ ಲಭ್ಯವಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಸ್ಮಾರ್ಟ್ ಮೀಟರ್ ಕಡ್ಡಾಯವಲ್ಲವೆಂದು ಹೇಳಿದ್ದರೂ, ಬೆಸ್ಕಾಂ ಕಡ್ಡಾಯಗೊಳಿಸಿದೆ,” ಎಂದು ನ್ಯಾಯಾಲಯದ ಮುಂದೆ ವಾದಿಸಿದರು.
ಹೈಕೋರ್ಟ್ ಕಿಡಿ – “ಫ್ರೀ ವಿದ್ಯುತ್ ಯಾರೂ ಕೇಳಿಲ್ಲ”
ವಿಚಾರಣೆ ವೇಳೆ ಹೈಕೋರ್ಟ್ ಬೆಸ್ಕಾಂನ ನೀತಿಯನ್ನು ಖಂಡಿಸಿ, “ನಿಮ್ಮಿಂದ ಉಚಿತ ವಿದ್ಯುತ್ ಕೇಳಿದವರು ಯಾರು? ಬಡವರು ಈ ದುಬಾರಿ ಮೀಟರ್ ಗಳನ್ನು ಹೇಗೆ ತೆಗೆದುಕೊಳ್ಳಬೇಕು?” ಎಂದು ತೀವ್ರ ಪ್ರಶ್ನೆ ಎಸೆದಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 4ಕ್ಕೆ ಮುಂದೂಡಲಾಗಿದೆ.
ಸ್ಮಾರ್ಟ್ ಮೀಟರ್ ಎಂದರೇನು?
ಸ್ಮಾರ್ಟ್ ಮೀಟರ್ ಎಂಬುದು ಆಧುನಿಕ ವಿದ್ಯುತ್ ಮಾಪನ ಸಾಧನ. ಗ್ರಾಹಕರು ತಮಗಿನ ಬಳಕೆಯನ್ನು ನಿಖರವಾಗಿ ಗಮನಿಸಬಹುದು. ಇದರಲ್ಲಿ ಪ್ರೀಪೇಯ್ಡ್ ವ್ಯವಸ್ಥೆಯು ಇರುವ ಕಾರಣ, ಮೊಬೈಲ್ ಸಿಮ್ ರೀಚಾರ್ಜ್ ಮಾಡುವ ರೀತಿಯಲ್ಲಿ ವಿದ್ಯುತ್ ಬಳಕೆ ಮಾಡಲು ಅವಕಾಶ ಕಲ್ಪಿಸಿದೆ.
ವಿದ್ಯುತ್ ದರ ಹೆಚ್ಚಳ ಕೂಡ ಶಾಕ್
ಇನ್ನು, ಕೆಇಆರ್ಸಿ ಆದೇಶದಂತೆ ಎಪ್ರಿಲ್ 1, 2025 ರಿಂದ ಪ್ರತಿ ಯೂನಿಟ್ಗೆ 36 ಪೈಸೆ ದರ ಏರಿಕೆಯಾಗಿದೆ. ಇದರಿಂದ ವಿದ್ಯುತ್ ಬಿಲ್ಲುಗಳಲ್ಲಿ ಇನ್ನಷ್ಟು ಬಾರದ ಹೊರೆಯಾಗಲಿದೆ.
ರಾಜಕೀಯ ಪ್ರಜ್ಞೆ ಹೆಚ್ಚಳ
ಈ ಸ್ಮಾರ್ಟ್ ಮೀಟರ್ ವಿವಾದವು ರಾಜಕೀಯ ತಿಕ್ಕಾಟಕ್ಕೂ ಕಾರಣವಾಯಿತು. ಬಿಜೆಪಿ, “ಕಾಂಗ್ರೆಸ್ ಸರ್ಕಾರ ಜನರ ಮೇಲೆ ಆರ್ಥಿಕ ಭಾರ ಹಾಕುತ್ತಿದೆ,” ಎಂದು ಆರೋಪಿಸಿದರೆ, ಕಾಂಗ್ರೆಸ್ ಸರ್ಕಾರ, “ಸ್ಮಾರ್ಟ್ ಮೀಟರ್ ಮೂಲಕ ಪಾರದರ್ಶಕತೆ ಹೆಚ್ಚಿಸಲು ಈ ಕ್ರಮ ಅವಶ್ಯಕ,” ಎಂದು ಸಮರ್ಥಿಸಿಕೊಂಡಿದೆ.
ಮುಂದಿನ ಹಂತ ಏನು?
ಹೈಕೋರ್ಟ್ ನೀಡಿರುವ ತಾತ್ಕಾಲಿಕ ತಡೆ ಗ್ರಾಹಕರಿಗೆ ಕೆಲ ಮಟ್ಟಿಗೆ ರಿಲೀಫ್ ನೀಡಿದರೂ, ಯೋಜನೆಯ ಭವಿಷ್ಯ ಜೂನ್ 4ರಂದು ನಡೆಯಲಿರುವ ವಿಚಾರಣೆ ಬಳಿಕ ಸ್ಪಷ್ಟವಾಗಲಿದೆ.

